ಭೂಮಿ ಸುಪೋಷಣೆ ಇಂದಿನ ತುರ್ತು ಅಗತ್ಯ

    ಮಹಾತ್ಮ ಗಾಂಧಿಯವರ ಮಾತುಗಳು ನೆನಪಾಗುತ್ತಿವೆ,” ಭೂಮಿ ಮನುಷ್ಯನ ಅಗತ್ಯತೆಗಳನ್ನಷ್ಟೇ ಪೂರೈಸಬಲ್ಲದು, ಆದರೆ ಮನುಷ್ಯನ ದುರಾಸೆಗಳನ್ನಲ್ಲ.” 
     ಆದರೆ ಈ ಸತ್ಯವನ್ನು ಮರೆತ ಮಾನವ ಈ ಭೂಮಿಯನ್ನು ತನ್ನ ಸ್ವಾರ್ಥ ಸಾಧೆನೆಗೆ, ದುರಾಸೆಗಳ ಈಡೇರಿಕೆಗೆ ಬಳಸಿಕೊಂಡು ಶೋಷಿಸುತ್ತಿದ್ದಾನೆ. ನಮಗಾಗಿ ಇರುವುದೊಂದು ಭೂಮಿಯೂ ಮಾನವನ ಈ ಕೃತ್ಯಗಳಿಂದಾಗಿ ದಿನದಿಂದ ದಿನಕ್ಕೆ ದಣಿಯುತ್ತಿದೆ. ವರ್ಷದಿಂದ ವರ್ಷಕ್ಕೆ ಏರಿಕೆಯನ್ನು ಕಾಣುತ್ತಿರುವ ಈ ಜಗತ್ತಿನ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ ಇನ್ನೂ ಐದು ಭೂಮಿಗಳಾದರೂ ಬೇಕು ಎನ್ನುವ ಮಾತು ವಿಜ್ಞಾನಿಗಳಿಂದ ಕೇಳಿ ಬರುತ್ತಿದೆ. ತನ್ನ ಒಡಲಿನಲ್ಲಿ ನಮ್ಮಂತಹ ಕೋಟ್ಯಂತರ ಜೀವ ಸಂಕುಲವನ್ನು ಹೊತ್ತು ಪೊರೆಯುವ ಈ ಭೂಮಿಯ ಒಡಲಾಳದ ನೋವನ್ನು ನಾವುಗಳು ಆಲಿಸುವ, ಈ ಭೂಮಿಯ ಸಾಂತ್ವನಕ್ಕಾಗಿ ಈ ವಿಶ್ವ ಭೂ ದಿನದಂದು ಕಟಿಬದ್ಧರಾಗೋಣ.
    ಕಳೆದ 60-70 ವರ್ಷಗಳಿಂದ ’ಅಭಿವೃದ್ಧಿ’ ಎನ್ನುವ ನಾಮಫಲಕದೊಂದಿಗೆ ಭೂಮಿಯ ಪರಿಸರ ವ್ಯವಸ್ಥೆಯಲ್ಲಿ ಮಾನವನ ಲಾಭದ ಓಟ, ಲೋಭದ ಆಟ  ಎಲ್ಲೆ ಮೀರುತ್ತಿದೆ. ಹೀಗಾಗಿ ಮಾನವ ಎನ್ನುವ ಕೇವಲ 3 ಲಕ್ಷ ವರ್ಷಗಳಷ್ಟು ಹಿಂದೆ ಭೂಮಿಯ ಮೇಲೆ ಕಾಣಿಸಿಕೊಂಡ ಭೀಕರ ಜೀವಿ 450 ಕೋಟಿ ವರ್ಷಗಳಷ್ಟು ಹಳೆಯದಾದ ಭೂಮಿಯ ಬಾಳನ್ನು ಬಸವಳಿಸುತ್ತಿದ್ದಾನೆ. ಕರ್ವಾಲೋ ಮಾತಿನಂತೆ ’ನಂಬಿಕೆಗೆ ಅನರ್ಹವಾಗಿರುವ ಮೊದಲನೇ ಜೀವಿ ಎರಡು ಕಾಲಿನ ಮಾನವ.’ ಎಂಬುದನ್ನು ಸತ್ಯವೆಂದು ತನ್ನ ಕೃತಿಗಳ ಮೂಲಕ ತೋರಿಸಿಕೊಡುತ್ತಿದ್ದಾನೆ ಮಾನವ.
ಈ ಭೂಮಿ ತನ್ನೊಡಲಿನಲ್ಲಿ ಇಷ್ಟೊಂದು ಜೀವ ಸಂಕುಲಗಳನ್ನು ಹೊತ್ತು ಸಾಕಲು ಪ್ರಮುಖ ಕಾರಣ ಭೂಮಿ ಹೊಂದಿರುವ ವಾತಾವರಣ. ಭೂಮಿಯಿಂದ ಮೇಲಕ್ಕೆ ನೂರು ಕಿ.ಮೀಗಳನ್ನು ಕ್ರಮಿಸಿದರೆ ಈ ವಾತಾವರಣವಿಲ್ಲ ಹಾಗೂ ತತ್ಪರಿಣಾಮವಾಗಿ ಯಾವ ಜೀವಿಯೂ ಬದುಕಿ ಉಳಿಯಲಾರದು. ಅದೇ ರೀತಿಯಲ್ಲಿ ಈ ವಾತಾವರಣ ಸೂರ್ಯನಿಂದ ಸೂಸಲ್ಪಟ್ಟ ಯುವಿ ಕಿರಣಗಳನ್ನು ಭೂಮಿಯ ಮೇಲೆ ಬೀಳದಂತೆ ಮಾಡುವ ರಕ್ಷಾ ಕವಚವಾಗಿ  ಸದಾ ಕರ್ತವ್ಯ ನಿರ್ವಹಿಸುತ್ತದೆ.
     ಈ ವಾತಾವರಣವು ಭೂಮಿಯ ಮೇಲೆ ಹವಾಮಾನದ ಹೊಂದಾಣಿಕೆಯನ್ನು ನಿರ್ವಹಿಸುವಲ್ಲಿಯೂ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇಂದು ಭೂಮಿಯಲ್ಲಿರುವ ಆಹಾರದಲ್ಲಿ ಶೇ. 35ರಷ್ಟನ್ನು ಮಾನವನೇ ಭಕ್ಷಿಸುತ್ತಾನೆ. ಈ ಭಕ್ಷಣೆಯ ಜೊತೆಗೆ ಆಹಾರ ಪ್ರಮಾಣದಲ್ಲಿ ಆಹಾರ ತ್ಯಾಜ್ಯಗಳನ್ನು ಸಹ ಈ ಭೂಮಿಯ ಅಂಗಳದಲ್ಲಿ ಚೆಲ್ಲುತ್ತಿದ್ದಾನೆ. ಇದರಿಂದ ಮಾಲಿನ್ಯದ ಪ್ರಮಾಣ ದಿನೇ-ದಿನೇ ಹೆಚ್ಚಾಗುತ್ತಿದೆ. ಜನಸಂಖ್ಯೆ 800 ಕೋಟಿಗಳಾನ್ನು ಮುನ್ನುಗ್ಗಿ ಮೀರುತ್ತಿರುವ ಹಾಗೆಯೇ, ಮರಗಳ ಸದಾ ಧರೆಗುರುಳುತ್ತಿದೆ. 
ಅಗತ್ಯ ವಸ್ತುಗಳ ಪೂರೈಕೆಗಾಗಿ ಕೈಗಾರಿಕೆಗಳ ಸ್ಥಾಪನೆ ಮಿತಿಮೀರುತ್ತಿದೆ. ಆದರಿಂದ ಹೊರಬರುವ ಮಾಲಿನ್ಯ ಭೂಮಿಗೆ ನರಕದ ಅನುಭವವನ್ನು ಮಾಡಿಕೊಡುತ್ತಿದೆ. ಯತ್ರೋಪಕರಣಗಳ, ವಾಹನಗಳ ಬಳಕೆ ಅತಿಯಾಗಿ ವಾತಾವರಣದಲ್ಲಿ ವಿಷಕಾರಿ ಅನಿಲಗಳು ಹೆಚ್ಚಾಗುತ್ತಿದೆ.ಇದೆಲ್ಲದರ ಪರಿಣಾಮವಾಗಿ ಹವಾಮಾನದ ವೈಪರೀತ್ಯ ಭೂಮಿಯ ಮೇಲೆ ತಾಂಡವವಾಡುತ್ತಿದೆ. ಕಳೆದ ಕೇವಲ 7 ದಶಕಗಳಲ್ಲಿ ಭೂಮಿಯ ಮೇಲಿದ್ದ 85 ಸಸ್ತನಿಗಳ ಪ್ರಭೇದ, 80 ಪ್ರಭೇದ, 35 ಉಭಯವಾಸಿ ಪ್ರಭೇದಗಳು, 30  ಸರೀಸೃಪಗಳ ಪ್ರಭೇದಗಳು ಹಾಗೂ 159 ಪಕ್ಷಿ ಪ್ರಬೇದಗಳು ಸಂಪೂರ್ಣವಾಗಿ ಕಣ್ಮರೆಯಾಗಿವೆ.
     ಈ ವಾತಾವರಣದಲ್ಲಿ ಬದಲಾವಣೆ ಸೂಕ್ಷ್ಮ ಜೀವಿಗಳ ಬದುಕಿಗೂ ಸಂಚಕಾರವನ್ನು ತಂದಿತ್ತಿದೆ. ಆಹಾರ ಸರಪಳಿಯಲ್ಲಿ ಬರಿಗಣ್ಣಿಗೆ ಕಾಣಿಸದಿದ್ದರೂ ಗುರುತರವಾದ ಕಾರ್ಯ ನಿರ್ವಹಿಸುವ ಈ ಸೂಕ್ಷ್ಮ ಜೀವಿಗಳ ಅವನತಿಯೂ ವ್ಯವಸ್ಥೆಯಲ್ಲಿ ಭೀಕರ ಪರಿಣಾಮವನ್ನುಂಟು ಮಾಡುತ್ತಿದೆ.
ಇದೇ ರೀತಿಯ ಅವಸ್ಥೆ ಮುಂದುವರಿದಲ್ಲಿ 2078ರ ಹೊತ್ತಿಗೆ ಈಗ ಇರುವ ಒಟ್ಟು ಜೀವಿಗಳಲ್ಲಿ ಶೇ.80ರಷ್ಟು ಅಳಿದು ಹೋಗಲಿದೆ ಹಾಗೂ ಆ ಅಳಿವಿನ ಸರದಿಯಲ್ಲಿ ಮಾನವನೂ ೧೦ನೆಯ ಸ್ಥಾನದಲ್ಲಿದ್ದಾನೆ.
ಭೂಮಿ ಇಲ್ಲದೆ ಜೀವವಿಲ್ಲ, ಭೂಮಿ ಇಲ್ಲದೆ ಜನ್ಮವಿಲ್ಲ, ಭೂಮಿ ಇಲ್ಲದೆ ಬದುಕಿಲ್ಲ, ಹಾಗಾಗಿ ಭೂಮಿ ಉಳಿಸಿ ಜೀವ ಉಳಿಸಿ, ಸ್ವಚ್ಛ, ಸಮೃದ್ಧ ಭೂಮಿಯನ್ನು ಮುಂದಿನ ಜನಾಂಗಕ್ಕೆ ವರ್ಗಾಯಿಸೋಣ .

 

 - ದೀಕ್ಷಿತ್ ರೈ  

ಉಪನ್ಯಾಸಕರು, ಎಸ್.ಡಿ.ಎಮ್.  ಪದವಿ ಕಾಲೇಜು, ಉಜಿರೆ